ದ ಪಾಲಿಟಿಕ್

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೆನಪಿನಲ್ಲಿ…!

ದ ಪಾಲಿಟಿಕ್

ದ ಪಾಲಿಟಿಕ್

ಇಂದಿನ ಭಾರತದ ಅತ್ಯಂತ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ವ್ಯಕ್ತಿ ಮತ್ತು ವಿಚಾರ……
ಮನುಸ್ಮೃತಿ ಆಧಾರಿತ RSS ಪ್ರೇರಿತ ಹಿಂದುತ್ವದ ಪ್ರತಿಪಾದಕರು, ಜಾತಿ ವ್ಯವಸ್ಥೆಯ ಮೇಲ್ವರ್ಗದವರು ಮೇಲ್ನೋಟಕ್ಕೆ ಎಷ್ಟೇ ಒಳ್ಳೆಯ ಅಭಿಪ್ರಾಯ ಹೊಂದಿದ್ದರೂ ಆಂತರ್ಯದಲ್ಲಿ ಅಂಬೇಡ್ಕರ್ , ಅವರ ವಿಚಾರಗಳು ಮತ್ತು ಸಂವಿಧಾನವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದೆ ದ್ವೇಷಿಸುತ್ತಾರೆ. ಇಂದಿನ ಮೀಸಲಾತಿ ಮತ್ತು ಸಾಮಾಜಿಕ ಅಸಮಾನತೆಗೆ ಅಂಬೇಡ್ಕರ್ ಕಾರಣ ಎಂದು ಖಾಸಗಿಯಾಗಿ ಮಾತನಾಡಿಕೊಳ್ಳುತ್ತಾರೆ.

ಹಾಗೆಯೇ ದಲಿತರು ದೇವರನ್ನೂ ತಿರಸ್ಕರಿಸಿ ಅಂಬೇಡ್ಕರ್ ತಮ್ಮ ಬದುಕನ್ನು ರೂಪಿಸಿದ ಮಹಾನ್ ಶಕ್ತಿ. ಭಾರತದ ಎಲ್ಲಾ ಅಸಮಾನತೆಗಳ ನಿವಾರಣೆಯ ಏಕೈಕ ಆಶಾಕಿರಣ ಎಂದು ಅತಿಮಾನುಷ ಶಕ್ತಿಯಂತೆ ಪೂಜಿಸುತ್ತಾರೆ ಅಥವಾ ಹಾಗೆ ನಡೆದುಕೊಳ್ಳುತ್ತಾರೆ.
ಇನ್ನು ಸಾಮಾನ್ಯರು ಎಂದಿನಂತೆ ಬುದ್ಧ ಬಸವ ಗಾಂಧಿ ಅಂಬೇಡ್ಕರ್ ವಿವೇಕಾನಂದ ಮುಂತಾದವರನ್ನು ಕಲಿಯುಗದ ರಾಮ ಕೃಷ್ಣರ  ಅವತಾರ. ಅವರು ನಮ್ಮಿಂದ ಬಹಳ ದೂರ ಎಂದು ಭಾವಿಸಿ ಮೂರ್ತಿ ಸ್ಥಾಪಿಸಿ ಕಡ್ಡಿ ಕರ್ಪೂರ ಹಚ್ಚಿ ಕೈ ಮುಗಿದು ತಮ್ಮ ಎಂದಿನ ಕೆಲಸಕ್ಕೆ ಮುನ್ನಡೆಯುತ್ತಾರೆ. ಅವರ ವಿಚಾರವಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.

ಹಾಗಾದರೆ ಅಂಬೇಡ್ಕರ್ ಯಾರು ಮತ್ತು ಏನು ?
ಬಹುಶಃ,ಭಾರತದ ನಾಗರಿಕತೆಯ ಉಗಮ, ಸಂಸ್ಕೃತಿಗಳ ಬೆಳವಣಿಗೆ, ಮನುಸ್ಮೃತಿ ವೇದ ಉಪನಿಷತ್ತುಗಳು, ಬುದ್ಧ ಜೈನ ಧರ್ಮಗಳ ಹುಟ್ಟು ,ಮುಸ್ಲಿಂ ಕ್ರಿಶ್ಚಿಯನ್ ಮುಂತಾದ ಧರ್ಮಗಳ ದಾಳಿ ಮುಂತಾದ ಎಲ್ಲಾ ವಿಷಯಗಳನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿದ ,ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಬಹಳ ಗಂಭೀರವಾಗಿ ಅರ್ಥಮಾಡಿಕೊಂಡ ಮತ್ತು ಅದನ್ನು ನಿಷ್ಠುರವಾಗಿ ದಾಖಲಿಸಿದ ವ್ಯಕ್ತಿ ಅಂಬೇಡ್ಕರ್.ಪಾಶ್ಚಾತ್ಯರ ಉದಾರಿಕರಣ ,ಮಾರ್ಕ್ಸ್ ರ ಸಮತಾವಾದ,ಆಧುನಿಕ ನಾಗರಿಕತೆಯ ಗುಣಲಕ್ಷಣಗಳನ್ನು ತುಂಬಾ ವಸ್ತುನಿಷ್ಠವಾಗಿ ಅರ್ಥಮಾಡಿಕೊಂಡವರು.

ಅವರಷ್ಟು ಓದು ಮತ್ತು ಅಧ್ಯಯನ ಸಾಮಾನ್ಯ ಮನುಷ್ಯರಿಗೆ ಅಸಾಧ್ಯವೇ ಎನಿಸುತ್ತದೆ.
ಅದೃಷ್ಟವಶಾತ್ ,ಆ ಓದು ಅಧ್ಯಯನ ಉಪಯೋಗಿಸಿಕೊಳ್ಳಲು ಅವರಿಗೆ ಬಹುದೊಡ್ಡ ಅವಕಾಶ ದೊರೆಯಿತು. ಭಾರತದಂತಹ ವೈವಿಧ್ಯಮಯ ಸಂಸ್ಕೃತಿಯ ರಾಷ್ಟ್ರಕ್ಕೆ ಸಂವಿಧಾನ ರಚಿಸುವ ಕರಡು ಸಮಿತಿಗೆ ಅಧ್ಯಕ್ಷರಾದರು.
ನೀವು ಮೇಲ್ವರ್ಗದವರೇ ಆಗಿರಿ, ಕೆಳವರ್ಗದವರೇ ಆಗಿರಿ ಅಥವಾ ಯಾವ ಪಂಥದ ಅನುಯಾಯಿಗಳೇ ಆಗಿರಿ ಭಾರತದ ಸಂವಿಧಾನದ ಮೂಲ ಆಶಯಗಳನ್ನು ಗಮನಿಸಿದಾಗ ನಿಜಕ್ಕೂ ನಿಮಗೆ ಅಂಬೇಡ್ಕರ್ ದರ್ಶನವಾಗುತ್ತದೆ.

ಮನುಸ್ಮೃತಿಯ ಕೆಲವು ಅಮಾನವೀಯ ಆಚರಣೆಗಳನ್ನು ಅತ್ಯಂತ ಕಠಿಣವಾಗಿ ವಿರೋಧಿಸಿದರೂ ಕೂಡ ಎಲ್ಲಿಯೂ ವ್ಯಕ್ತಿಗತವಾಗಿ ಯಾವುದೇ ಜಾತಿಯನ್ನು ದ್ವೇಷಿಸುವ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಲಿಲ್ಲ. ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ನಿರ್ವಂಚನೆಯಿಂದ ನೀಡಿದರು. ಕಾರ್ಮಿಕರು ಮಹಿಳೆಯರು ಪುರೋಹಿತರು ರೈತರೂ ಸೇರಿ ಎಲ್ಲರ ಹಿತವನ್ನು ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಮುಸ್ಲಿಂ ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರ ಹಿತವನ್ನು ಅವರ ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿಯೇ ಅವರಿಗೆ ರಕ್ಷಣೆ ಒದಗಿಸಿದರು.

ಅಂಬೇಡ್ಕರ್ ಅವರನ್ನು ಒಳಗೊಳಗೆ ವಿರೋಧಿಸುವ ಗೆಳೆಯರೇ ಗಮನಿಸಿ, ಅಂದು ಅಸ್ಪೃಶ್ಯತೆಯ ಭೀಕರ ದೌರ್ಜನ್ಯಕ್ಕೆ ಒಳಗಾಗಿರುವವರಿಗಾಗಿ ಅವರು ಕೇವಲ 10 ವರ್ಷದ ಮಟ್ಟಿಗೆ ಅವರ ಚೇತರಿಕೆಗಾಗಿ ಮೀಸಲಾತಿ ಒದಗಿಸಿದರು. ಅಂದರೆ ಅವರ ಮಾನವೀಯ ಕಳಕಳಿ ಮತ್ತು ಜವಾಬ್ದಾರಿ ದಯವಿಟ್ಟು ಅರ್ಥಮಾಡಿಕೊಳ್ಳಿ. 
ಇಡೀ ಸಂವಿಧಾನದಲ್ಲಿ ಎಲ್ಲಿಯೂ ತಾವು ಜೀವನ ಪರ್ಯಂತ ವಿರೋಧಿಸಿದ ಮೇಲ್ಜಾತಿಗಳ ಮೇಲೆ ದ್ವೇಷ ಸಾಧಿಸುವ ಒಂದೇ ಒಂದು ಅಂಶ ಸೇರಿಸಲಿಲ್ಲ. 

ಹಿಂದೂ ಧರ್ಮದ ಆಚರಣೆಗಳ ಮೇಲೆ ತುಂಬಾ ಕೋಪವಿದ್ದರೂ,ಇಸ್ಲಾಂ ಕ್ರಿಶ್ಚಿಯನ್ ಮುಂತಾದ ಧರ್ಮಗಳ ಆಹ್ವಾನವಿದ್ದರೂ, ಅವರು ಕೊನೆಯ ದಿನಗಳಲ್ಲಿ ಬೌದ್ದ ಧರ್ಮಕ್ಕೆ ಮತಾಂತರವಾಗುತ್ತಾರೆ. ಅದಕ್ಕೆ ಅವರು ಕೊಡುವ ಕಾರಣ ಭೌದ್ದ ಧರ್ಮ ಈ ನೆಲದ ಧರ್ಮ. ಅಂದರೆ  ಈ ನೆಲದ ಬಗ್ಗೆ ಅವರ ಬದ್ದತೆ ನಮಗೆ ಅರ್ಥವಾಗುತ್ತದೆ.

ಈಗಿನ ಎಲ್ಲೋ ಕೆಲವು ದಲಿತ ನಾಯಕರುಗಳ ರಾಜಕೀಯ ದೊಂಬರಾಟ, ಸ್ವಾರ್ಥ ಅವಕಾಶವಾದಿ ನಡವಳಿಕೆ, ಆವೇಶ ಬಂದವರಂತೆ ಅಂಬೇಡ್ಕರ್ ಹೆಸರನ್ನು ಹೇಳುವುದು ಮತ್ತು ಅದನ್ನು ರಕ್ಷಣೆಯ ಗುರಾಣಿಯಾಗಿ ಬಳಸುವುದು, ಮಹಾನ್ ಕ್ರಾಂತಿಕಾರಿಗಳಂತೆ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಎಲ್ಲವನ್ನೂ ಸಮರ್ಥಿಸುವುದನ್ನು ನೋಡಿ ಅಂಬೇಡ್ಕರ್ ಬಗ್ಗೆ ನಿಮಗೆ ಪೂರ್ವಾಗ್ರಹವಿದ್ದರೆ ಅದನ್ನು ಮರೆತು ಬಿಡಿ. ಈ ರೀತಿಯ ವರ್ತನೆ ಕೇವಲ ಕೆಲವು ದಲಿತರು ಮಾತ್ರವಲ್ಲ ಇಡೀ ಭಾರತೀಯ ರಾಜಕೀಯ ವ್ಯವಸ್ಥೆಯೇ ಈ ರೀತಿಯ ಸ್ವಾರ್ಥ ರಾಜಕೀಯ ವ್ಯವಸ್ಥೆಯಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ : ಭಾರತದ ಸದ್ಯದ ರಾಜಕೀಯ ಪರಿಸ್ಥಿತಿ : ವಿವೇಕಾನಂದ. ಹೆಚ್.ಕೆ.

ನೀವು ಈ ದೇಶವನ್ನು , ಇಲ್ಲಿನ ನೆಲವನ್ನು, ಈ ಜನರನ್ನು ಪ್ರೀತಿಸುವವರೇ ಆದರೆ, ಅಂಬೇಡ್ಕರ್ ಅವರನ್ನು ಹೊರತುಪಡಿಸಿದ ನಿಮ್ಮ ಪ್ರೀತಿ ಪರಿಪೂರ್ಣವಾಗುವುದಿಲ್ಲ. ನಾಗರಿಕತೆಯ ಉಗಮದಿಂದ ನಾಗರಿಕ ಪ್ರಜ್ಞೆಯವರೆಗೆ, ಬ್ರಾಹ್ಮಣ್ಯದಿಂದ ಅಸ್ಪೃಶ್ಯತೆಯ ಆಚರಣೆಯವರೆಗೆ, ಮನುಸ್ಮೃತಿಯಿಂದ ಸಂವಿಧಾನದವರೆಗೆ ,ಎಲ್ಲವನ್ನೂ ಸಮೀಕರಣಗೊಳಿಸಿದ ವ್ಯಕ್ತಿ ಅಂಬೇಡ್ಕರ್.

ಅವರನ್ನು ಎಲ್ಲರೂ ಗೌರವಿಸೋಣ ಮತ್ತು ಅದಕ್ಕಿಂತ ಮುಖ್ಯವಾಗಿ ಅಳವಡಿಸಿಕೊಳ್ಳೋಣ. ಏಕೆಂದರೆ…….
ಸಂವಿಧಾನ,ಬಾಬಾ ಸಾಹೇಬ್ ನೀಡಿದ ನೆರಳು…..‌

ಸುಮ್ಮನೆ ಒಮ್ಮೆ ಯೋಚಿಸಿ ನೋಡಿ, ಒಂದು ವೇಳೆ ಅಂಬೇಡ್ಕರ್ ಅವರಲ್ಲದೆ ಬೇರೆ ಯಾರಾದರೂ ಭಾರತದ ಸಂವಿಧಾನ ರಚನಾ ಕರಡು  ಸಮಿತಿಯ ಅಧ್ಯಕ್ಷರಾಗಿದ್ದಿದ್ದರೆ ಅದರ ಮೂಲ ಸ್ವರೂಪ ಏನಾಗಿರುತ್ತಿತ್ತು…….

1) ಅಂಬೇಡ್ಕರ್ ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಿ ಅದೇ ವಾತಾವರಣದಲ್ಲಿ ಬೆಳೆದು ಬಂದವರು. ಅವರ ವಯಸ್ಸು ಮತ್ತು ಶಿಕ್ಷಣ ಬೆಳೆದಂತೆಲ್ಲಾ ಅವರಿಗೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅಸಮಾನತೆ, ಅಮಾನವೀಯತೆ ಸ್ವತಃ ಅರಿವಾಗತೊಡಗಿತು. ಅದೃಷ್ಟವಶಾತ್ ಅವರು ಹುಟ್ಟಿನಿಂದಲೇ ಪ್ರತಿಭಾವಂತ ವಿದ್ಯಾರ್ಥಿ ಮತ್ತು ಸಹಜವಾಗಿ ಕೆಲವು ಮಕ್ಕಳಲ್ಲಿ ಕಂಡುಬರುವ ಪ್ರತಿಭೆ ಮತ್ತು ಶ್ರದ್ಧೆ ಅವರಲ್ಲಿ ಅಂತರ್ಗತವಾಗಿತ್ತು.

2) ಅಂಬೇಡ್ಕರ್ ಕೇವಲ ಭಾರತೀಯ ಸಮಾಜದ ಬಗ್ಗೆ ಮಾತ್ರ ಅಧ್ಯಯನ ಮಾಡಲಿಲ್ಲ. ಇಲ್ಲಿನ ವೇದಾಧ್ಯಯನ, ಮನುಸ್ಮೃತಿಗಳು ಮಾತ್ರ ಓದಿನ ವಿಷಯಗಳಾಗಿರಲಿಲ್ಲ. ಪಾಶ್ಚಾತ್ಯ ಸಂಸ್ಕೃತಿಗಳನ್ನು ಅವರದೇ ನೆಲದಲ್ಲಿ ಓದಿ ಡಾಕ್ಟರೇಟ್ ಮೀರಿದ ಅಧ್ಯಯನ ಮಾಡಿದರು. ನಮ್ಮ ಸಂಸ್ಕೃತಿಗೆ ಭಿನ್ನ ಸಂಸ್ಕೃತಿಯ ಅಧ್ಯಯನ ಅವರಲ್ಲಿ ಉಂಟುಮಾಡಿರುವ ಮಾನಸಿಕ ಘರ್ಷಣೆಯನ್ನು ಊಹಿಸುವುದು ಕಷ್ಟ.

3) ಓದು ಅಧ್ಯಯನ ಮಾತ್ರವಲ್ಲದೆ ವಿಶಾಲ ಅರಿವಿನ ಮನಸ್ಥಿತಿ ಮತ್ತು ಅದನ್ನು ಪ್ರಕಟಿಸಲು ಸಾರ್ವಜನಿಕ ಜೀವನದ ಪ್ರವೇಶವೂ ಅವರ ಬದುಕಿನಲ್ಲಾದ ಮಹತ್ವದ ಘಟನೆ. ಏಕೆಂದರೆ ಒಬ್ಬ ಪ್ರತಿಭಾವಂತ ವ್ಯಕ್ತಿ ಆ ಪ್ರತಿಭೆಯನ್ನು ತನ್ನ ಔನತ್ಯಕ್ಕೆ ಮಾತ್ರ ಬಳಸುವ ಸಾಧ್ಯತೆಯೇ ಹೆಚ್ಚು. ಸಾರ್ವಜನಿಕ ಜೀವನ ಸ್ವಲ್ಪ ತಲೆನೋವಿನ ಕೆಲಸ.

4) ಐತಿಹಾಸಿಕ ಅದೃಷ್ಟವೂ ಅವರ ಪಾಲಿಗೆ ಒದಗಿ ಬಂದಿತು. ಈ ಜಗತ್ತು ಕಂಡ ಕೆಲವೇ ಶ್ರೇಷ್ಠ ಮಾನವ ಪ್ರಾಣಿಗಳಲ್ಲಿ ಒಬ್ಬರಾದ ಮಹಾತ್ಮ ಗಾಂಧಿಯವರ ಸಮಕಾಲೀನತೆ, ಒಡನಾಟ, ತೀವ್ರ ಚರ್ಚೆ, ವಿರೋಧ ಎಲ್ಲವನ್ನೂ ಅನುಭವಿಸುವ ಅವಕಾಶ ಬಾಬಾ ಸಾಹೇಬರಿಗೆ ಸಿಕ್ಕಿತು. ಶೋಷಿತ ಸ್ವಾತಂತ್ರ್ಯ ಮತ್ತು ಭಾರತ ದೇಶದ ಸ್ವಾತಂತ್ರ್ಯ ಎಂಬ ಎರಡು ಬೃಹತ್ ಹೋರಾಟಗಳ ಸಮಯದಲ್ಲಿ ತಮ್ಮ ಚಿಂತನೆಗಳನ್ನು ರೂಪಿಸಿಕೊಳ್ಳುವ ಸುವರ್ಣಾವಕಾಶ ಅವರ ಪಾಲಿಗೆ ದೊರೆಯಿತು.  ಅಲ್ಲದೆ ಗಾಂಧಿ ಎಂಬ ಮಹಾತ್ಮ ( ಅಂಬೇಡ್ಕರ್ ಅವರನ್ನು ಮಹಾತ್ಮ ಎಂದು ಒಪ್ಪಿಕೊಳ್ಳಲಿಲ್ಲ. ಅದು ಅವರ ಅಭಿಪ್ರಾಯ ಮತ್ತು ಸ್ವಾತಂತ್ರ್ಯ ) ಅಂಬೇಡ್ಕರ್ ಅವರನ್ನು ಯಾವ ಕಾರಣದಿಂದಲೂ ನಿರ್ಲಕ್ಷಿಸದೆ  ಅವರೊಂದಿಗೆ ಕೆಲವು ವಿಷಯಗಳಲ್ಲಿ ವಿರೋಧ ಇದ್ದರೂ ಅವರಿಗೆ ಹೆಚ್ಚಿನ ಮಹತ್ವ ನೀಡಿದರು. ಆಗಿನ ಕಾಲಕ್ಕೆ ಅಂಬೇಡ್ಕರ್ ಅವರನ್ನು ಸ್ವಲ್ಪ ಮಟ್ಟಿಗೆ ನಿರ್ಲಕ್ಷಿಸಬಹುದಾದಷ್ಟು ದೈತ್ಯ ಶಕ್ತಿ ಗಾಂಧಿಗೆ ಇದ್ದರೂ ಪೂನಾ ಒಪ್ಪಂದದ ಸಮಯದಲ್ಲಿ ಅಂಬೇಡ್ಕರ್ ಅವರನ್ನು ಒಪ್ಪಿಸಲು ಸ್ವತಃ ಉಪವಾಸ ಮಾಡಿದರು ಎಂದರೆ ಅವರಿಗೆ ಅಂಬೇಡ್ಕರ್ ಅವರ ಪ್ರತಿಭೆ ಮತ್ತು ಸಂಘಟನಾ ಶಕ್ತಿಯ ಬಗ್ಗೆ ಬಹುದೊಡ್ಡ ಗೌರವವಿತ್ತು ಎನಿಸುತ್ತದೆ.

 5 ) ವಿಶ್ವದ ಆಧ್ಯಾತ್ಮಿಕ ತವರೂರು ಎಂದು ಕರೆಯಲಾಗುವ, ಅಸ್ಪೃಶ್ಯತೆ ಎಂಬ ಕೆಟ್ಟ ಕೊಳಕ ಸಾಮಾಜಿಕ ವ್ಯವಸ್ಥೆ ಹೊಂದಿದ್ದ ಭಾರತದ ಸಂವಿಧಾನ ರಚಿಸುವ ನೇತೃತ್ವ ವಹಿಸುವ  ಅವಕಾಶ ಅದೇ ಜನಾಂಗದ ಒಬ್ಬ ವ್ಯಕ್ತಿಗೆ 1945/46 ರ ಆಸುಪಾಸಿನಲ್ಲಿ ದೊರೆಯಿತು ಎಂಬುದು ಈಗಲೂ ನಂಬಲಾಸಾಧ್ಯ ಎನಿಸುತ್ತದೆ ಮತ್ತು ಅಂಬೇಡ್ಕರ್ ದೈತ್ಯ ಶಕ್ತಿಯ ಅರಿವಾಗುತ್ತದೆ.

ಇದು ಅಂಬೇಡ್ಕರ್ ಅವರ ಜ್ಞಾನದ ಅಗಾಧತೆಯನ್ನು ತೋರಿಸುತ್ತದೆ ಮತ್ತು ಅವರು ಕರಡು ಸಮಿತಿಯ ಅಧ್ಯಕ್ಷರಾಗಲು ಇದ್ದ ಅರ್ಹತೆ ಮಾತ್ರ. ಅದು ಅವರ ವೈಯಕ್ತಿಕ ಸಾಮರ್ಥ್ಯ. ಈಗ ಸಂವಿಧಾನದಲ್ಲಿ ಅವರು ನಮಗೆ ನೀಡಿರುವ ಹಕ್ಕುಗಳು ನಾವು ಹೇಗೆ ಅರ್ಥೈಸಿಕೊಳ್ಳಬೇಕು…………

1) ಮನುಸ್ಮೃತಿಗಳ ಆಧಾರದ ಮೇಲೆ ನಿರ್ಮಾಣವಾಗಿದ್ದು ಭಾರತೀಯ ಸಮಾಜ. ಮಹಿಳೆಯರಿಗೆ ಗೌರವ ನೀಡಲಾಗಿತ್ತು ನಿಜ ಆದರೆ ಅದು ಅಧಿಕಾರಯುತ, ಷರತ್ತು ಬದ್ಧ ಮತ್ತು ನಿಯಂತ್ರಿತವಾಗಿತ್ತು. ಸ್ವಾತಂತ್ರ್ಯ ಮತ್ತು ಸಮಾನತೆ ಇರಲೇ ಇಲ್ಲ. ಮುಸ್ಲಿಂ ದಾಳಿಕೋರರ ನಂತರ ಅದು ಮತ್ತಷ್ಟು ಕಠಿಣವಾಯಿತು. ಬ್ರಿಟಿಷರ ಕಾಲದಲ್ಲಿ ಒಂದು ಚೂರು ಸಡಿಲವಾಯಿತು. ಅಂಬೇಡ್ಕರ್ ಅವರಲ್ಲದೆ ಬೇರೆ ಯಾರೇ ಸಂವಿಧಾನ ರಚಿಸುವ ಅಧಿಕಾರ ಪಡೆದಿದ್ದರೆ ಖಂಡಿತ ನಾವು ನಮ್ಮ ಹೆಣ್ಣು ಮಕ್ಕಳ ಈ ರೀತಿಯ ಸ್ವಾತಂತ್ರ್ಯ ಸಮಾನತೆ ಮತ್ತು ಅಭಿವೃದ್ಧಿ ಕಾಣುವುದು ಸಾಧ್ಯವಿರಲಿಲ್ಲ ಮತ್ತು ಅದಕ್ಕಾಗಿ ಇನ್ನೂ ಅನೇಕ ವರ್ಷಗಳ ಹೋರಾಟ ಮಾಡಬೇಕಾಗಿತ್ತು. ಅದನ್ನು ಕಾನೂನಿನ ಮೂಲಕ ಒದಗಿಸಿಕೊಟ್ಟ ಅಂಬೇಡ್ಕರ್ ಅವರಿಗೆ ಎಲ್ಲಾ ಜಾತಿ ಸಮುದಾಯಗಳ ಹೆಣ್ಣು ಮಕ್ಕಳು ಕೃತಜ್ಞರಾಗಿರಬೇಕು. ಇಂದಿನ ರಾಜಕೀಯ ವ್ಯವಸ್ಥೆ ಹೇಗೇ ಇರಲಿ ಹೆಣ್ಣು ಮಕ್ಕಳ ಕನಿಷ್ಠ ನೆಮ್ಮದಿಯ ಬದುಕಿಗೆ ನಿಜವಾದ ಅಡಿಪಾಯ ಹಾಕಿದವರು ಬಾಬಾ ಸಾಹೇಬ್. ಪಾಶ್ಚಾತ್ಯ ನಾಗರಿಕತೆಯ ಅಧ್ಯಯನ ಅದಕ್ಕೆ ಕಾರಣ.

2) ಇದೇ ಅಂಶಗಳು ಎಲ್ಲಾ ವರ್ಗದ ಕಾರ್ಮಿಕರಿಗೂ ಅನ್ವಯಿಸುತ್ತದೆ. ಕೈಗಾರಿಕಾ ಕ್ರಾಂತಿಯ ವಿಷಯಗಳು, ಮಾರ್ಕ್ಸ್ ಸಿದ್ದಾಂತಗಳನ್ನು ಅಧ್ಯಯನ ಮಾಡಿದ ಕಾರಣದಿಂದಾಗಿಯೇ ಕಾರ್ಮಿಕ ಕಾನೂನುಗಳು ಸಂವಿಧಾನದಲ್ಲಿ ಅಡಕವಾಗಲು ಸಾಧ್ಯವಾಯಿತು. ಮಾರ್ಕ್ಸ್ ಓದದ ಯಾರಿಗೂ ಈ ರೀತಿಯ ಕಾನೂನು ಮಾಡಲು‌ ಸಾಧ್ಯವೇ ಇಲ್ಲ. 8 ಗಂಟೆಗಳ ಕೆಲಸ ಮತ್ತು ವಾರದ ರಜಾ ಮಾರ್ಕ್ಸ್ ಪ್ರೇರಿತ ಎಂಬುದು ಸ್ಪಷ್ಟ. ಬಂಡವಾಳಶಾಹಿ ವ್ಯವಸ್ಥೆ ಕಾರ್ಮಿಕರನ್ನು ಹೀನಾಯವಾಗಿ ದುಡಿಸಿಕೊಳ್ಳಲು ಇದ್ದ ಅನಿಯಮಿತ ಅಧಿಕಾರಕ್ಕೆ ಮಿತಿ ಹೇರಿದೆ ನಮ್ಮ ಕಾನೂನುಗಳು.

3) ಅತಿ ಮುಖ್ಯವಾಗಿ ಸಾಮಾನ್ಯ ಜನರು ಗಮನಹರಿಸಬೇಕಾದ ವಿಷಯ ಅಂಬೇಡ್ಕರ್ ಕೇವಲ ತಾವು ಅನುಭವಿಸಿದ ಜಾತಿ ದೌರ್ಜನ್ಯದ ಬಗ್ಗೆ ಮಾತ್ರ ಒತ್ತುಕೊಡಲಲ್ಲಿ. ಈ ಸಮಾಜದಲ್ಲಿ ಬೆಳೆದು ಬಂದಿದ್ದ ಆರ್ಥಿಕ ಮತ್ತು ಧಾರ್ಮಿಕ ದೌರ್ಜನ್ಯವೂ ಅವರ ವಿಶಾಲ ಹೃದಯದಲ್ಲಿ ಜಾಗ ಪಡೆಯಿತು. ಶ್ರೀಮಂತರು ಬಡವರನ್ನು ಶೋಷಿಸಬಹುದು ಎಂಬ ಕಾರಣದಿಂದಾಗಿಯೇ ನಾಗರಿಕ ಹಕ್ಕುಗಳು ಮತ್ತು ಅಪರಾಧ ಸಂಹಿತೆಯಲ್ಲಿ ಕಾನೂನಾತ್ಮಕ ಹೋರಾಟ ಮಾಡಲು ಅಸಹಾಯಕರಿಗೂ ಅವಕಾಶ ಕಲ್ಪಿಸುವ ನ್ಯಾಯಾಂಗದ ಕೆಲವು ಸೂಕ್ಷ್ಮ ಅಂಶಗಳನ್ನು ಸೇರಿಸಿದರು. ಬಹುಶಃ ಯಾರಾದರೂ ವಕೀಲರು ಅದರ ತಾಂತ್ರಿಕ ಅಂಶಗಳನ್ನು ಇನ್ನಷ್ಟು ಕೂಲಂಕಷವಾಗಿ ಹೇಳಬಹುದು.
ಭಾರತದ ಧಾರ್ಮಿಕ ವೈವಿಧ್ಯತೆಯನ್ನು ಕಾಪಾಡಲು ಭಾರತದ್ದೇ ವಿಶಿಷ್ಟ ಧಾರ್ಮಿಕ ಸ್ವಾತಂತ್ರ್ಯದ ಅಂಶಗಳನ್ನು ಸೇರಿಸಿದ್ದಕ್ಕಾಗಿ ಎಲ್ಲಾ ಧಾರ್ಮಿಕ ನಾಯಕರು ಅವರಿಗೆ ಋಣಿಯಾಗಿರಬೇಕು. ಜಾತಿ ಮೀಸಲಾತಿಯ ಕಾರಣದಿಂದ ಮೇಲ್ವರ್ಗದವರಿಗೆ ಸ್ವಲ್ಪ ಅಸಮಾಧಾನ ಇರಬಹುದೇ ಹೊರತು ಅವರ ಮಾನವೀಯ ತುಡಿತ ಮತ್ತು ಸಮಾನತೆಯ ನಡೆಯ ಬಗ್ಗೆ ಮನುಷ್ಯರಾದವರಿಗೆ ಯಾವುದೇ ತಕರಾರು ಇರುವುದಿಲ್ಲ.

4) ಬಾಬಾ ಸಾಹೇಬರ ಮತ್ತೊಂದು ಹೆಗ್ಗಳಿಕೆ ಭಾರತೀಯ ಸಮಾಜದ ಮೂಲ ಸ್ವರೂಪಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ಸನಾತನ ಧರ್ಮದ ಮೌಲ್ಯಗಳನ್ನು ಗೌರವಿಸುತ್ತಾ ಕೇವಲ ಅದರಲ್ಲಿ ಇರಬಹುದಾದ ಕೆಟ್ಟ ಅಂಶಗಳನ್ನು ಮಾತ್ರ ಗುರುತಿಸಿ ಅದಕ್ಕೆ ತಿದ್ದುಪಡಿ ತಂದು ಅನೇಕ ಅಂಶಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಮೇಲ್ವರ್ಗದ ಮೇಲೆ ಯಾವುದೇ ಸೇಡಿನ ಕ್ರಮದ ಲವಲೇಷವೂ ಅದರಲ್ಲಿ ಕಾಣಬರುವುದಿಲ್ಲ. ಬದುಕಿನ ವಿವಿಧ ಹಂತಗಳಲ್ಲಿ ಸಾಕಷ್ಟು ಅಸಮಾನತೆಯ ನೋವು ಅವರಿಗೆ ಕಾಡಿದೆ. ಆದರೆ ಸಂವಿಧಾನ ಕರಡು ರಚಿಸುವ ಜವಾಬ್ದಾರಿ ದೊರೆತಾಗ ಅದು ತಮ್ಮ ಮನಸ್ಸಿನಲ್ಲಿ ಸುಳಿಯದಂತೆ ನೋಡಿ ಕೊಂಡಿದ್ದಾರೆ. ಈಗಲೂ ಭಾರತ ಬಹುಸಂಖ್ಯಾತರು ಸಂವಿಧಾನದ ಅಡಿಯಲ್ಲಿ ಹಿಂದೂ ಸಂಸ್ಕೃತಿಯ ಜೀವನ ಶೈಲಿಯನ್ನೇ ಅಳವಡಿಸಿಕೊಂಡಿದ್ದಾರೆ.

5) ಕಾಲದ ಸಂಘರ್ಷದಲ್ಲಿ ಒಂದಷ್ಟು ಬದಲಾವಣೆಯ ಅವಶ್ಯಕತೆ ಇರಬಹುದು. ಸ್ವತಃ ಅಂಬೇಡ್ಕರ್ ಹೇಳುವಂತೆ ನೀತಿ ನಿಯಮಗಳ ನಿಜವಾದ ಯಶಸ್ಸು ಅದನ್ನು ಜಾರಿಗೊಳಿಸುವವರ ಪ್ರಾಮಾಣಿಕತೆಯ ಮೇಲೆ ಅವಲಂಬಿಸಿರುತ್ತದೆ. ಸುಮಾರು 70 ವರ್ಷಗಳ ನಂತರ ತಿರುಗಿ ನೋಡಿದಾಗ ಭಾರತದ ಏಕತೆ, ವೈವಿಧ್ಯತೆ ಮತ್ತು ಸಮಗ್ರತೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಅದಕ್ಕೆ ಸಂವಿಧಾನದ ಮೂಲ ಸ್ವರೂಪ ಮತ್ತು ಬಾಬಾ ಸಾಹೇಬರ ಅಧ್ಯಯನ, ಚಿಂತನೆ, ದೂರದೃಷ್ಟಿ ಮತ್ತು ವಿಶಾಲ ಮನಸ್ಥಿತಿ ಕಾರಣ. 

ಮೊದಲು ಹೇಳಿದ್ದನ್ನೇ ಮತ್ತೆ ನೆನಪಿಸುತ್ತೇನೆ. ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು ಊಹಿಸಿ ನೋಡಿ. ಬಹುಶಃ ಈಗಿನಷ್ಟು ಸಾಮಾಜಿಕ ನೆಮ್ಮದಿ ಸಿಗುತ್ತಿರಲಿಲ್ಲ. ಆದ್ದರಿಂದ ಅಂಬೇಡ್ಕರ್ ಎಲ್ಲಾ ಭಾರತೀಯರು ಗೌರವಿಸಲೇ ಬೇಕಾದ ವ್ಯಕ್ತಿತ್ವ ಹೊಂದಿರುವವರು.

ಹಾಗೆಂದು ಸಂಪೂರ್ಣ ತೃಪ್ತಿ ಇದೆಯೇ ? ಖಂಡಿತ ಇಲ್ಲ. ನಮ್ಮ ರಾಜಕೀಯ ಆಡಳಿತ ವ್ಯವಸ್ಥೆ ಭ್ರಷ್ಟಗೊಂಡಿದೆ. ನ್ಯಾಯ ಬಹುತೇಕ ಉಳ್ಳವರ ಪಾಲಾಗುತ್ತಿದೆ. ಅನೇಕ ವರ್ಗಗಳು ತಮ್ಮದೇ ಕಾರಣದಿಂದಾಗಿ ಅಸಮಾಧಾನ ಹೊಂದಿವೆ. ಕೆಲವು ಕಾನೂನುಗಳು ದುರುಪಯೋಗವಾಗುತ್ತಿದೆ. ಅದಕ್ಕೆ ಮೂಲ ಕಾರಣ ಮಾನವೀಯ ಮೌಲ್ಯಗಳ ಕುಸಿತ. ಅದನ್ನು ಮತ್ತೆ ನಾವು ಹಳಿಗೆ ತಂದರೆ ಮುಂದಿನ ದಿನಗಳು ನಮ್ಮ ಪಾಲಿಗೆ ಶಾಂತಿ ನೆಮ್ಮದಿ ಮೂಡಿಸುತ್ತದೆ. ಈಗ ನಮ್ಮೆಲ್ಲರ ಆದ್ಯತೆ ಮಾನವೀಯ ಮೌಲ್ಯಗಳ ಪುನರುಜ್ಜೀವನ…….

ಎಂದಿನಂತೆ,ಅಂಬೇಡ್ಕರ್ ಅವರೇನು ಪರಿಪೂರ್ಣರೇನು ಅಲ್ಲ. ಅವರು ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯ. ಅವರ ಚಿಂತನೆಗಳು ಚರ್ಚೆಗೆ ಒಳಪಡಲೇ ಬೇಕು.ಕಾಲದ ನಿರ್ಣಯದಲ್ಲಿ ಬದಲಾವಣೆ ಅನಿವಾರ್ಯ ಕ್ರಿಯೆ. ಆದರೆ ಅದು ಸುಧಾರಣೆಯ ರಚನಾತ್ಮಕ ಪ್ರಗತಿಗೆ ನಾಗರಿಕ ಪ್ರಜ್ಞೆಗೆ ಪೂರಕವಾಗಿರಬೇಕೆ ಹೊರತು ರಾಜಕೀಯ ಕಾರಣದಿಂದಾಗಿ ದ್ವೇಷದ ಬದಲಾವಣೆಯಾಗಿರಬಾರದು.ಅವರ ಹುಟ್ಟುಹಬ್ಬದ ಸವಿ ನೆನಪುಗಳೊಂದಿಗೆ……‌

  • ವಿವೇಕಾನಂದ ಹೆಚ್‌ ಕೆ

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!