ಬಸವ ಧರ್ಮ ಪೀಠದ ಮುಖ್ಯಸ್ಥರಾದ ಗಂಗಾ ಮಾತಾಜಿ ಅವರಿಗೆ ಬಸವಕುಮಾರ್ ಪಾಟೀಲ್ ಅವರೊಂದು ಬಹಿರಂಗ ಪತ್ರ ಬರೆದಿದ್ದಾರೆ. ಆ ಪತ್ರ ‘ದ ಪಾಲಿಟಿಕ್‘ ಗೆ ದೊರೆತಿದೆ.
ಪತ್ರದಲ್ಲಿರುವ ಸಂಪೂರ್ಣ ವಿವರ ಇಲ್ಲಿದೆ.
ಪೂಜ್ಯ ಶ್ರೀ ಮಾತೆ ಗಂಗಾದೇವಿ ಅವರಿಗೆ ಶರಣಾರ್ಥಿಗಳು, ತಮಗೊಂದು ಬಹಿರಂಗ ಮನವಿ ಪತ್ರ.
ಪೂಜ್ಯರೆ,
ಪೂಜ್ಯ ಮಾತಾಜಿಯವರು ಲಿಂಗೈಕ್ಯರಾದ ನಂತರ ಬಸವ ಧರ್ಮ ಪೀಠದಲ್ಲಿ ನಡೆಯುತ್ತಿರುವ ಅಹಿತಕರ ಬೆಳವಣಿಗೆಗಳು ಕಂಡು ಸಂಸ್ಥೆಯ ಹಿತೈಷಿಗಳು ಆತಂಕಿತರಾಗಿದ್ದಾರೆ. ಇಂದಲ್ಲ ನಾಳೆ ಎಲ್ಲವೂ ಸರಿ ಆಗಬಹುದು ಎಂಬ ಆಶಾಭಾವನೆಯನ್ನು ಹೊಂದಿ ನನ್ನಂತೆಯೇ ಅನೇಕ ಬಸವಾನುಯಾಯಿಗಳು ನೋವು ನುಂಗಿಕೊಂಡು ಮೌನಕ್ಕೆ ಜಾರಿದ್ದಾರೆ. ಆದರದು ದಿನದಿಂದ ದಿನಕ್ಕೆ ಜಗಳ, ವೈಮನಸ್ಸು ಹೆಚ್ಚಾಗುತ್ತಿರುವುದು ನೋವಿನ ಸಂಗತಿಯಾಗಿದೆ.
ನಮ್ಮೆಲ್ಲರ ಪ್ರೀತಿಯ ಹಾಗೂ ಅಭಿಮಾನದ ಬಸವ ಧರ್ಮ ಪೀಠದಲ್ಲಿ ದಿನೇ ದಿನೇ ಏನಾಗುತ್ತಿದೆ? ಅದು ಎತ್ತ ಸಾಗುತ್ತಿದೆ? ಎಂಬುದನ್ನು ಕಂಡು ಪೂಜ್ಯ ಲಿಂಗಾನಂದ ಸ್ವಾಮೀಜಿ ಮತ್ತು ಮಾತಾಜಿಯವರ ಹೆಗಲಿಗೆ ಹೆಗಲು ಕೊಟ್ಟು ಸಂಸ್ಥೆಯನ್ನು ಕಟ್ಟಿದ ಹಿರಿಯರು ಕಣ್ಣೀರು ಸುರಿಸುತ್ತಿದ್ದಾರೆ. ಈಗಿನವರು ಮಾತನಾಡುತ್ತಿರುವಷ್ಟು ಸುಲಭವಾಗಿ ಸಂಸ್ಥೆ ಕಟ್ಟಿದ್ದಲ್ಲ. ಅದರ ಹಿಂದೆ ಸಾವಿರಾರು ಬಸವ ಭಕ್ತರ ದೊಡ್ಡ ತ್ಯಾಗವಿದೆ. ಅಲ್ಲೊಂದು ದೂರದೃಷ್ಟಿಕೊನವಿತ್ತು. ಅಂದು ಅನೇಕರು ತನು, ಮನ, ಧನ, ಬೆವರು ಮತ್ತು ರಕ್ತ ಬಸೆದು ಸಂಸ್ಥೆ ಕಟ್ಟಿದ್ದಾರೆ. ಹಲವರು ತಮ್ಮ ಬದುಕೇ ಕೊಟ್ಟಿದ್ದಾರೆ. ಇವೆಲ್ಲವೂ ತಮಗೆ ಗೊತ್ತಿರುವ ಸಂಗತಿಯಾಗಿದೆ. ಇವುಗಳ ಅರಿವಿಲ್ಲದವರು ಮಾತ್ರ ದಿನೇ ದಿನೇ ಸಂಸ್ಥೆಯ ಹೆಸರು ಮತ್ತು ಭವಿಷ್ಯವನ್ನು ಅರಿತೋ ಅರಿಯದೆಯೋ ಕತ್ತಲೆಗೆ ದೂಡುತ್ತಿದ್ದಾರೆ. ಇದರಿಂದಾಗಿ ಅದರ ಗತವೈಭವ ಈಗಾಗಲೇ ಭಾಗಶಃ ಕಳೆದಿದೆ.
ಸಂಸ್ಥೆಯಲ್ಲಿ ಏನು ನಡೆಯುತ್ತಿದೆ? ಹೀಗೇಕೆ ಆಗುತ್ತಿದೆ? ಇದರಲ್ಲಿ ಯಾರದ್ದು ತಪ್ಪು, ಯಾರದ್ದು ಸರಿಯೆಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಕಾರಣವೆಂದರೆ ಪ್ರಸಕ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಯಾರಲ್ಲೂ ಇಲ್ಲ. ಎಲ್ಲೆಡೆ ಇಂದು ಬರೀ ದ್ವೇಷ, ಅಸೂಯೆ, ಅಹಮಿಕೆ, ಜಗಳ, ಕಿರಿಕಿರಿ, ಕೀಳು ಮಟ್ಟದ ಆರೋಪ – ಪ್ರತ್ಯಾರೋಪ, ತಂತ್ರ , ಕುತಂತ್ರ, ದೂಷಣೆ ಮತ್ತು ನಮ್ಮದೇ ಸತ್ಯವೆಂಬ ಉಡಾಫೆ ಮತ್ತು ಉದ್ಧಟತನದ ಮಾತುಗಳನ್ನೇ ಕೇಳುತ್ತಿದ್ದೇವೆ. ಮೇಲ್ನೋಟಕ್ಕೆ ‘ಇದಕ್ಕೆಲ್ಲಕ್ಕೂ ಸ್ವಾರ್ಥ, ದ್ವೇಷ, ಅಧಿಕಾರ ದಾಹ ಮತ್ತು ಅಹಮಿಕೆಯೆ ಕಾರಣವಾಗಿದೆ’ ಎಂದು ಜನರು ಮಾತನಾಡುತ್ತಿದ್ದಾರೆ. ಇದು ಯಾರಿಗೂ ಒಳ್ಳೆಯದಲ್ಲ, ಇದರಿಂದ ಯಾರಿಗೂ ಒಳಿತಾಗುವುದಿಲ್ಲ.
ಪೂಜ್ಯ ಅಪ್ಪಾಜಿ ಮತ್ತು ಮಾತಾಜಿಯವರು ಯಾವುದೇ ಸರ್ಕಾರಕ್ಕೂ ಕೈಚಾಚದೆ, ಶರಣರ ಸಹಾಯ ಸಹಕಾರದಿಂದ ಬಸವ ಧರ್ಮ ಪೀಠ ಕಟ್ಟಿ ಬೆಳೆಸಿದರು. ಆದರೆ ಅದು ಇಂದು ಹಲವು ಗುಂಪುಗಳಾಗಿ ಒಡೆದು, ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಇದರಿಂದಾಗಿ ಸಂಸ್ಥೆ ಈಗಾಗಲೇ ರಚನಾತ್ಮಕ ಕಾರ್ಯಗಳಿಂದ ಬಹುದೂರ ಸರಿದಿದೆ. ಇದನ್ನೆಲ್ಲ ನೋಡುತ್ತಿರುವ ಮಾತಾಜಿ – ಅಪ್ಪಾಜಿಯವರು ಮಮ್ಮಲ ಮರುಗಿ ಕಣ್ಣೀರು ಸುರಿಸುತ್ತಿರಬಹುದು. ಅವರ ಕಣ್ಣೀರು ಒರೆಸುವವರು ಯಾರು? ಅವರ ನೋವು ಅರ್ಥ ಮಾಡಿಕೊಳ್ಳುವವರು ಯಾರೆಂಬುದು ಯಕ್ಷ ಪ್ರಶ್ನೆಯಾಗಿದೆ. ಅವರು ಸಂಸ್ಥೆಗಾಗಿ ಸವೆದು, ಸರಳವಾಗಿ ಬಾಳಿ-ಬದುಕಿ ಸಂಸ್ಥೆ ಕಟ್ಟಿ ಬೆಳೆಸಿದ್ದು ಈ ದಿನಕ್ಕಾಗಿಯೇ? ಈ ಬೀದಿ ರಂಪಾಟಕ್ಕಾಗಿಯೇ? ಅವರ ತ್ಯಾಗ, ಸಂದೇಶ, ಶ್ರಮ ಯಾರ ಹೃದಯಕ್ಕೂ ತಟ್ಟುತ್ತಿಲ್ಲವೆಂಬುದೇ ಆಶ್ಚರ್ಯಕರವಾಗಿದೆ. ಈ ಅಹಿತಕರ ಬೆಳವಣಿಗೆಗೆ ಕಾರಣಕರ್ತರಾದವರು ಒಂದಲ್ಲ ಒಂದು ದಿನ ಅವರಿಗೆ ಉತ್ತರ ಕೊಡಲೇ ಬೇಕಾಗುತ್ತದೆ. ಇದು ತಪ್ಪಿದ್ದಲ್ಲ. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಅಂದು ಸಂಸ್ಥೆ ಕಟ್ಟಲು ದುಡಿದ ಸಾವಿರಾರು ಮನಸ್ಸುಗಳು ಇಂದು ಕೂಡಾ ಬಸವ ಧರ್ಮ ಪೀಠದ ಏಳಿಗೆಯನ್ನು ಬಯಸುತ್ತಿವೆ. ಈಗಲಾದರೂ ಬಿಕ್ಕಟ್ಟಿಗೆ ದಾರಿ ಕಂಡು ಕೊಂಡು ಇವೆಲ್ಲಕ್ಕೂ ಇತಿಶ್ರೀ ಹಾಡಬಹುದಲ್ಲವೇ? ಈಗಾಗಲೇ ಕಾಲವಂತೂ ಮಿಂಚಿ ಹೋಗಿದೆ. ಅಪಾರ ಹಾನಿಯಾಗಿದೆ. ಹೀಗಿದ್ದರೂ ಕೊನೆಯ ಪ್ರಯತ್ನವೆಂಬಂತೆ ಸಂಸ್ಥೆಯನ್ನು ಉಳಿಸಿಕೊಂಡು ಮತ್ತೆ ಗತವೈಭವಕ್ಕೆ ಮರಳಲು ತಾವೇ ಪ್ರಯತ್ನಿಸಬೇಕಾಗಿದೆ. ಈ ನಡೆಯಲ್ಲಿ ಸಂಸ್ಥೆಯ ಹಿತದ ಜತೆಗೆ ಎಲ್ಲರ ಹಿತವೂ ಅಡಗಿದೆ. ಈಗ ಸಂಸ್ಥೆ ಉಳಿಸಲು ನಮಗೆ ಇದೊಂದೇ ದಾರಿ ಕಾಣುತ್ತಿದೆ.
ಯಾವುದೋ ಒಂದು ಬಿಕ್ಕಟ್ಟಾಗಲಿ, ಸಮಸ್ಯೆಯಾಗಲಿ ಉದ್ಭವವಾದರೆ ಅದಕ್ಕೆ ಪರಿಹಾರವೂ ಇರುತ್ತದೆ. ಈ ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ. ದೇಶ ದೇಶಗಳ ಮಧ್ಯೆ ಆಗಾಗ್ಗೆ ಬರುವ ದೊಡ್ಡ ದೊಡ್ಡ ಸಮಸ್ಯೆಗಳನ್ನು ಕೂಡಾ ಸಂಬಂಧಿಸಿದವರು ಒಂದೆಡೆ ಕೂತು ಚರ್ಚಿಸಿ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಇದಕ್ಕೆ ನೂರೆಂಟು ನಿದರ್ಶನಗಳು ನಮ್ಮ ಕಣ್ಣೇದುರಿನಲ್ಲಿವೆ. ಉದ್ವೇಗ, ಅಸಹನೆ, ಕಡುಕೋಪ, ಹಠಮಾರಿತನ, ದ್ವೇಷ, ಅಸೂಹೆಯಿಂದ ಏನು ಸಾಧಿಸಲು ಆಗುವುದಿಲ್ಲ. ಇದಕ್ಕೆ ಚರಿತ್ರೆಯೇ ಸಾಕ್ಷಿಯಾಗಿದೆ. ಇದು ಬಸವ ಧರ್ಮ ಪೀಠದಲ್ಲಿ ನಡೆಯುತ್ತಿರುವ ಜಗಳಕ್ಕೂ ಅನ್ವಯಿಸುತ್ತದೆ!
ಬಸವ ಧರ್ಮ ಪೀಠವಲ್ಲದೆ ಜಗಕ್ಕೆಲ್ಲ ಬಸವ ತತ್ವದ ಬಗ್ಗೆ ಪಾಠ ಮಾಡುತ್ತಿರುವ ಕೆಲವು ಮಠಗಳಲ್ಲೂ, ಸಂಸ್ಥೆಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಅಸಹ್ಯಕರ ಘನಂದಾರಿ ಕಾರ್ಯಗಳಿಂದಾಗಿ ಸಮಾಜದಲ್ಲಿ ಬಸವಾನುಯಾಯಿಗಳನ್ನು ಜನರು ನೋಡುವ ದೃಷ್ಟಿಕೋನವೇ ಬೇರೆಯಾಗಿದೆ. ‘ಇವರೆಲ್ಲಾ ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ’ ಎಂದು ಜನರು ನಮ್ಮ ಮುಖದ ಮೇಲೆ ಹೊಡೆದಂತೆ ಹೇಳುತ್ತಿದ್ದಾರೆ. ಬಸವ ಭಕ್ತರು ಜನರ ಮಾತಿಗೆ ನಿರುತ್ತರರಾಗಿ ತಲೆತಗ್ಗಿಸುತ್ತಿದ್ದಾರೆ. ಹೊಸ ಪೀಳಿಗೆ ಬಸವ ತತ್ವದ ಕಡೆಗೆ ಮುಖಮಾಡಲು ಈ ಬೆಳವಣಿಗೆಗಳು ತಡೆಗೋಡೆಯಾಗಿವೆ. ಇದು ಯಾವುದೋ ಒಂದು ಮಠ, ಸಂಸ್ಥೆಯಲ್ಲಿ ನಡೆಯುವ ಜಗಳವಾದರೂ ಇದರ ಪರಿಣಾಮ ನೇರವಾಗಿ ಸಮಾಜದ ಮೇಲೆ ಮತ್ತು ಬಸವ ತತ್ವದ ಮೇಲೆ ಬೀಳುತ್ತಿದೆ.
ಈ ಜಗಳಗಳು ಹೀಗೆ ಮುಂದುವರೆದರೆ ಬಸವ ತತ್ವಕ್ಕೆ ಹಿನ್ನಡೆಯಾಗಲಿದೆ. ಇದಕ್ಕೆ ಸೈದ್ಧಾಂತಿಕ ವಿರೋಧಿಗಳು ಬೇಕಾಗಿಲ್ಲ, ನಾವೇ ಸಾಕು, ನಮ್ಮ ಜಗಳವೇ ಸಾಕು. ಇತಿಹಾಸ ಎಲ್ಲವೂ ಗಮನಿಸುತ್ತಿದೆ ಮತ್ತು ದಾಖಲಿಸಿಕೊಳ್ಳುತ್ತಿದೆ. ಯಾರೇ ಮರೆತರು ಇತಿಹಾಸ ಮರೆಯುವುದಿಲ್ಲ. ಮುಂದಿನ ಪೀಳಿಗೆ ನಮ್ಮನ್ನು ಸ್ವಾರ್ಥಿಗಳು, ಅಧಿಕಾರ – ಆಸ್ತಿಗಾಗಿ ಬಡೆದಾಡಿದವರು ಲೋಭಿ ಮನಸ್ಸುಳ್ಳವರು ಎಂದು ನೆನೆಸಿಕೊಂಡು ನಮ್ಮನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ ಎಂಬುವುದು ನಾವೆಲ್ಲರೂ ಮರೆಯದಿರೋಣ.
ಈಗಾಗಲೇ ಬಸವ ಧರ್ಮ ಪೀಠದಲ್ಲಿನ ಜಗಳವೂ ಎಲ್ಲಾ ಎಲ್ಲೆಗಳನ್ನು ಮೀರಿ ಈಗ ನ್ಯಾಯಲಯದ ಅಂಗಳದಲ್ಲಿದೆ. ಎಲ್ಲರಿಗೂ ನ್ಯಾಯಾಂಗ ಮೇಲೆ ಅಪಾರ ನಂಬಿಕೆಯಿದೆ. ಹೀಗಿದ್ದರೂ ನ್ಯಾಯ ಪಡೆಯಲು ತುಂಬಾ ವರ್ಷಗಳೇ ಬೇಕಾಗುತ್ತವೆ. ಅಲ್ಲಿಯವರೆಗೆ ಪ್ರಾಯಶಃ ಒಂದು ತಲೆಮಾರು ಹೋಗುತ್ತದೆ. ಬಸವ ತತ್ವ ಪ್ರಸಾರದ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಮನಸ್ಸುಗಳು ರಿಪೇರಿ ಆಗದಷ್ಟು ಇನ್ನೂ ಕಲುಷಿತಗೊಳ್ಳುತ್ತವೆ. ಎಲ್ಲರ ಆಯುಷ್ಯ ಜಗಳ ಆಡುವುದರಲ್ಲೇ ಕಳೆದು ಹೋಗುತ್ತದೆ ಎಂಬ ಆತಂಕ ನಮ್ಮದಾಗಿದೆ.
ಅದಕ್ಕಾಗಿ ಪೂಜ್ಯ ಮಾತಾಜಿಯವರೇ, ತಮ್ಮಲ್ಲಿ ನಮ್ಮದೊಂದು ಕಳಕಳಿಯ ಮನವಿ, ತಾವು ದೊಡ್ಡವರು ಮತ್ತು ದೊಡ್ಡ ಸ್ಥಾನದಲ್ಲಿರುವವರು, ತಾವು ಮನಸ್ಸು ಮಾಡಿ ಈ ಜಗಳಕ್ಕೆ ಇತಿಶ್ರೀ ಹಾಡಿ. ಇದು ತಮ್ಮ ಜವಾಬ್ದಾರಿಯೂ, ಕರ್ತವ್ಯವೂ ಆಗಿದೆ. ಒಂದು ಮನೆಯ ಜಗಳ ತಾಯಿ ಅಲ್ಲದೆ ಇನ್ನಾರು ಪರಿಹರಿಸಲು ಶಕ್ತರು? ತಮ್ಮಿಂದ ದೂರ ಇರುವ ಸಂಸ್ಥೆಯ ಪೂಜ್ಯರನ್ನು ಮತ್ತು ಬಸವ ಭಕ್ತರನ್ನು ಕರೆದು ತಾವು ಮಾತನಾಡಿಸಿ, ಅವರಲ್ಲಿ ಭರವಸೆ ಮೂಡಿಸಿದರೆ ಎಲ್ಲವೂ ಸುಖಾಂತ್ಯವಾಗಬಹುದು ಎಂಬ ನಂಬಿಕೆ ನಾವೆಲ್ಲಾ ಹೊಂದಿದ್ದೇವೆ.
ತಾವು ಈ ದಿಶೆಯಲ್ಲಿ ಪ್ರಯತ್ನ ಮಾಡುತ್ತಿರೆಂದು ನಂಬಿದ್ದೇವೆ. ನಮ್ಮ ನಂಬಿಕೆ ಹುಸಿಯಾಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಒಂದು ವೇಳೆ ತಾವು ಪ್ರಯತ್ನಿಸಿದರೂ ಜಗಳಕ್ಕೆ ಫುಲ್ ಸ್ಟಾಪ್ ಇಡಲು ಸಾಧ್ಯವಾಗದಿದ್ದಲ್ಲಿ, ತಾವೇ ಒಂದು ದಿನಾಂಕ ನಿಗದಿ ಮಾಡಿ ಬಸವ ಭಕ್ತರ ಮತ್ತು ಸಂಸ್ಥೆಯ ಹಿತೈಷಿಗಳ ಸಭೆ ಕರೆಯಿರಿ.ತಾವು ಸದರಿ ಸಭೆಯಲ್ಲಿ ಎಲ್ಲರೆದರು ಈ ಜಗಳಕ್ಕೆ ಕಾರಣವೇನೆಂದು ಬಿಚ್ಚಿಡಿ. ಹಾಗೆಯೇ ತಮ್ಮ ಮೇಲೆ ಅಸಮಾಧಾನದಿಂದ ಇರುವ ಪೂಜ್ಯರಿಗೂ ಮತ್ತು ಬಸವ ಭಕ್ತರಿಗೂ ಮಾತಾಡಲು ಅವಕಾಶ ಕೊಡಿ. ಅವಶ್ಯಕತೆ ಅನಿಸಿದರೆ ಇದಕ್ಕಾಗಿ ಒಂದು ಕಮೀಟಿಯೂ ಮಾಡೋಣ, ನಿರ್ಣಯವನ್ನು ಈ ಕಮೀಟಿಗೆ ಬಿಡೋಣ. ಇಲ್ಲೂ ಪರಿಹಾರವಾಗದಿದ್ದಲ್ಲಿ ಗೌರವಾನ್ವಿತ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪುನಃ ಮತ್ತೊಂದು ಸಮಿತಿ ಮಾಡೋಣ. ಸತ್ಯಾಸತ್ಯತೆ ಪರಿಶೀಲಿಸಿ ಅವರು ಕೊಡುವ ನಿರ್ಣಯಕ್ಕೆ ಎಲ್ಲರೂ ಬದ್ಧರಾಗೋಣ. ಈ ಮೂಲಕ ಪೂಜ್ಯ ಲಿಂಗೈಕ್ಯ ಮಾತಾಜಿಯವರು ತಮ್ಮ ಕೊನೆಯ ಶರಣ ಮೇಳದಲ್ಲಿ ಆಡಿದ ಮಾತುಗಳನ್ನು ಉಳಿಸಿಕೊಳ್ಳೋಣ. ಆ ಮೂಲಕ ಅವರಿಗೆ ಗೌರವಿಸೋಣ.
ಪೂಜ್ಯರೇ, ತಾವು ಕಳೆದ 50 ವರ್ಷಗಳಿಂದ ಈ ಸಂಸ್ಥೆಗಾಗಿ ದುಡಿದು ಸವೆದಿದ್ದಿರಿ. ತಮ್ಮ ಶ್ರಮ ಮತ್ತು ಸಂಸ್ಥೆಯ ಮೇಲೆ ತಮಗಿರುವ ಕಾಳಜಿ ಅಪಾರ. ಅದು ತಮ್ಮೆದುರೇ ಹಾಳಾಗಬಾರದು. ಹಾಳಾದರೆ ತಮಗೇ ಮೊದಲು ನೋವಾಗುವುದು. ಯಾವುದೋ ಕೆಟ್ಟ ಗಳಿಗೆಯಲ್ಲಿ ಸಂಸ್ಥೆಯ ಅನೇಕರು ತಮ್ಮ ಮೇಲೆ ಅಸಮಾಧಾನವಾಗಿ, ತಮ್ಮಿಂದ ದೂರ ಉಳಿದಿದ್ದಾರೆ. ಅವರಿಗೂ ಸಹ ಸಂಸ್ಥೆಯ ಮೇಲೆ ಕಾಳಜಿಯಿದೆ. ಸಂಸ್ಥೆ ಕಟ್ಟಿ ಬೆಳೆಸಲು ಅವರದ್ದೂ ಶ್ರಮವಿದೆ ಎಂಬುವುದು ಅಲ್ಲಗಳೆಯಲಾಗದು. ದಿನದಿಂದ ದಿನಕ್ಕೆ ಈ ಕಂದಕ ಹೆಚ್ಚಾಗುತ್ತಿದೆ. ಈ ಜಗಳದಲ್ಲಿ ಕೊನೆಗೊಂದು ದಿನ ಯಾರೇ ಗೆದ್ದರೂ ಇಲ್ಲಿ ಸೋಲುವುದು ಮಾತ್ರ ಸಂಸ್ಥೆ ಮತ್ತು ಲಿಂಗೈಕ್ಯ ಅಪ್ಪಾಜಿ – ಮಾತಾಜಿಯವರ ಆಶಯ ಹಾಗೂ ಕನಸುಗಳು.
ಕೊನೆಗೊಂದು ವಿನಮ್ರ ಮನವಿ: ನಿತ್ಯ ನಡೆಯುತ್ತಿರುವ ಬೀದಿ ರಂಪಾಟ ನೋಡಿ ನನ್ನ ಮನಸ್ಸು ವ್ಯಾಕುಲಗೊಂಡಿದೆ. ಮನಸ್ಸು ತಡಿಯದೇ ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವುದರಿಂದ ಇದನ್ನು ಬಹಿರಂಗಪಡಿಸಿದ್ದೇನೆ. ಬಸವ ಧರ್ಮ ಪೀಠ, ಅದು ನಮ್ಮ ಮನೆ. ಅದು ಯಾವಾಗಲೂ ಒಗ್ಗಟ್ಟಾಗಿ ಮತ್ತು ಬಲಿಷ್ಠವಾಗಿ ಇರಬೇಕೆಂಬುವುದು ನಮ್ಮ ಆಶಯವಾಗಿದೆ. ನನ್ನ ಕಳಕಳಿಯನ್ನು ತಾವು ಮತ್ತು ಉಳಿದೆಲ್ಲಾ ಪೂಜ್ಯರು ಅರ್ಥೈಸಿಕೊಂಡು ಎಲ್ಲವೂ ಸರಿಪಡಿಸುತ್ತಿರೆಂದು ನಂಬಿದ್ದೇನೆ.
ಶರಣುಗಳೊಂದಿಗೆ,
ಬಸವಕುಮಾರ್ ಪಾಟೀಲ್, ಬೀದರ.