ದ ಪಾಲಿಟಿಕ್

ಸೋನಿಯಾ ಗಾಂಧಿ, ಖರ್ಗೆಯವರ ಮೌನ : ಡಿಕೆಶಿಗೆ ತಂದ ಆನೆಬಲ 

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ನಿನ್ನೇ ಮಧ್ಯಾಹ್ನ ಮಾಧ್ಯಮಗಳಲ್ಲಿ ‘ಸಿದ್ದರಾಮಯ್ಯಗೆ ಸಿಎಂ ಪಟ್ಟ ಫೈನಲ್ ಫೈನಲ್ ‘ ಎಂಬ ಸುದ್ದಿ ಹಬ್ಬಿತ್ತು, ಮತ್ತೊಂದೆಡೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನಕ್ಕೆ ಸಿದ್ಧತೆಗಳೂ ಆರಂಭವಾಗಿತ್ತು. ಇದನ್ನು ಕಂಡು ಡಿಕೆಶಿ ಬಣ ಮತ್ತಷ್ಟು ಚುರುಕಾಗಿ, ಖರ್ಗೆಯವರ ಮನೆಗೆ ತೆರಳಿ, ಅವರ ಮೇಲೆ ಒತ್ತಡ ಹೇರಿ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಅವರಿಂದ ಮಾಧ್ಯಮಗಳಿಗೆ ಇನ್ನೂ ಸಿಎಂ ಹೆಸರು ಫೈನಲ್ ಮಾಡಿಲ್ಲ, ಮುಂದಿನ 48-72 ಗಂಟೆಯೊಳಗೆ ಮಾಡುತ್ತೇವೆ’ ಎಂದು ಸ್ಪಷ್ಟನೆ ನೀಡಿಸಿದ್ದಾರೆ. ಇದು ಡಿಕೆಶಿ ಬಲ ಹೆಚ್ಚಿಸುವಂತೆ ಮಾಡಿದೆ. 

ಚುನಾವಣೆಯ ಸಂದರ್ಭದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಾವಿಬ್ಬರೂ ಜೋಡೆತ್ತುಗಳು ಎಂದೇ ಬಿಂಬಿಸಿಕೊಂಡು ಬಂದಿದ್ದರು. ಫಲಿತಾಂಶ ಬಂದ ಮರುಗಳಿಗೆಯೇ ಹೆಗಲ ಮೇಲಿನ ನೋಗ ಕಳಚಿ, ಒಬ್ಬರನೊಬ್ಬರು ಮುಖ ನೋಡದಷ್ಟೂ ದೂರ ಸರದಿದ್ದಾರೆ. ಈಗ ಡಿಕೆಶಿ ‘ನನಗೆ ಸಿಎಂ ಮಾಡಿ, ಇಲ್ಲವೇ ಖರ್ಗೆಯವರಾಗಲಿ’ ಎಂದು ಪಟ್ಟು ಹಿಡಿದು ಹೊಸ ದಾಳ ಉರುಳಿಸಿದ್ದಾರೆ. ಆದರೆ, ಖರ್ಗೆಯವರು ಸಿಎಂ ಪಟ್ಟ ನಿರಾಕರಿಸಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.  

ಡಿಕೆಶಿ ‘ಸಿದ್ದರಾಮಯ್ಯನವರಿಗೆ ಶಾಸಕರ ಬೆಂಬಲ ಇರಬಹುದು. ಆದರೆ, ನನಗೆ ಅದರ ಅಗತ್ಯವಿಲ್ಲ. ನನ್ನ ಪರಿಶ್ರಮದಿಂದ ಪಕ್ಷ ಪೂರ್ಣ ಬಹುಮತ ಪಡೆದಿದೆ. ಇದಕ್ಕಾಗಿ ಸಾಕಷ್ಟು ಬೆವರು ಸುರಿಸಿದ್ದೇನೆ, ನನ್ನ ಶ್ರಮಕ್ಕೆ ತಕ್ಕ ಕೂಲಿ ನೀಡಿ’ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಇದು ಹೈಕಮಾಂಡಿಗೆ ಇಕ್ಕಟ್ಟಿಗೆ ಸಿಲುಕಿಸಿದೆ. ಜತೆಗೆ ರಾಹುಲ್ ಗಾಂಧಿಯವರ ತಲಾ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಡಿಕೆಶಿ ನಿರಾಕರಿಸಿದ್ದು ಎಲ್ಲವೂ ಅಯೋಮಯ ಆದಂತಾಗಿದೆ. 

ಸಿದ್ದರಾಮಯ್ಯನವರು 2006 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದಾಗಿನಿಂದ ಮೂರು ವರ್ಷ ಬಿಟ್ಟರೆ ಅವರೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ, ಎಂಟು ವರ್ಷ ವಿರೋಧ ಪಕ್ಷದ ನಾಯಕರಾಗಿದ್ದಾರೆ, ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿ ಆಗಿದ್ದಾರೆ, ಮೈತ್ರಿ ಸರ್ಕಾರಕದ ಅವಧಿಯಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈಗ ನನಗೂ ಅವಕಾಶ ನೀಡಿ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ. ಜತೆಗೆ ಪಕ್ಷ ಕಟ್ಟಲು ತನು,ಮನ, ದಿನದಿಂದ ದುಡಿದಿದ್ದೇನೆ, ಇದರ ಫಲವಾಗಿಯೇ ಇಂದು ನನಗೆ ಬಿಜೆಪಿ ಕಾನೂನಿನ ಕುಣಿಕೆಗೆ ಸಿಲುಕಿಸಿ ರಾಜಕೀಯ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ನನಗೆ ಸಿಎಂ ಪಟ್ಟ ಬೇಕೇಬೇಕು ಎಂದು ಹಠ ಹಿಡಿದು ಕೂತಿದ್ದಾರೆ. ಇದು ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿಸಿದೆ.  

2013 ರಲ್ಲಿ ಸಿದ್ದರಾಮಯ್ಯವರ ಸರ್ಕಾರದಲ್ಲಿ ಮಂತ್ರಿ ಪದವಿಗಾಗಿ ಗೋಗರೆದಿದ ಡಿಕೆಶಿ ಇಂದು ಪಕ್ಷದ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಅವರ ಶ್ರಮ, ದುಡಿಮೆ, ಸಂಘಟನಾ ಶಕ್ತಿ ಹಾಗೂ ಪಕ್ಷ ನಿಷ್ಠೆ ಜತೆಗೆ ಸೋನಿಯಾ ಗಾಂಧಿ, ಖರ್ಗೆಯವರ ಬೆಂಬಲವೂ ಕಾರಣವಾಗಿದೆ. 

ಇಬ್ಬರೂ ಪಟ್ಟು ಸಡಿಲಿಸದ ಪರಿಣಾಮ ಕಾಂಗ್ರೆಸ್ ಹೈಕಮಾಂಡ್ ‘ಇತ್ತ ದರಿ ಅತ್ತ ಪುಲಿ’ ಎಂಬ ಸ್ಥಿತಿಗೆ ಸಿಲುಕಿದೆ. ಡಿಕೆಶಿಗೆ ಪಟ್ಟ ಕಟ್ಟಿದರೆ, ಸರ್ಕಾರದಲ್ಲಿ ಸಿದ್ದರಾಮಯ್ಯನವರ ಸ್ಥಾನವೇನು ಎಂಬ ಪ್ರಶ್ನೆಗೆ ಉತ್ತರ ಸಿಗದೆ ಹೈರಾಣಾಗಿಸಿದೆ. ಡಿಕೆಶಿಗೆ ಸಿಎಂ ಮಾಡಿದರೆ ಸಿದ್ದರಾಮಯ್ಯವರ ರಾಜಕೀಯ ನಿವೃತ್ತಿ ಘೋಷಣೆ ಮಾಡಬಹುದು, ಇಲ್ಲವೇ ಬಂಡಾಯ ಸಾರಬಹುದು. ಇವೆರಡನ್ನೂ ತಡೆಯುವ ಶಕ್ತಿ ಕಾಂಗ್ರೆಸ್ ಹೈಕಮಾಂಡಿಗೆ ಇಲ್ಲ. ಸಿದ್ದರಾಮಯ್ಯ ಇಲ್ಲದೆ ಬರುವ ಲೋಕಸಭಾ ಚುನಾವಣೆ ಎದುರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಜತೆಗೆ ಡಿಕೆಶಿಗೆ ಸಿಎಂ ಕುರ್ಚಿ ಮೇಲೆ ಕೂಡಿಸಿದರೆ ಇಡಿ, ಐಟಿ, ಸಿಬಿಐ ರಾಜ್ಯದಲ್ಲೇ ಮೋಕ್ಕಾಂ ಹೂಡಬಹುದು ಎಂಬ ಚಿಂತೆಯೂ ಕಾಡುತ್ತಿದೆ. ಆಕ್ರಮ ಆಸ್ತಿ ಗಳಿಕೆಯ ಕೇಸ್ ನಲ್ಲಿ ಡಿಕೆಶಿ ಜೈಲಿಗೆ ಸೇರಿದರೆ ‘ಕಾಂಗ್ರೆಸ್ ಸಿಎಂ ಜೈಲು ಪಾಲಾಗಿದ್ದಾರೆ’ ಎಂದು ಹೇಳಲು ಬಿಜೆಪಿಗೆ ಅಸ್ತ್ರ ಸಿಕ್ಕಿದಂತಾಗುತ್ತದೆ. ಇದರಿಂದ ಈಗ ಪುಟಿದೇಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್ ಬಿದ್ದಿದೆ. 

ಸಿದ್ದರಾಮಯ್ಯನರಿಗೆ ಅವರ ಜನಪ್ರಿಯತೆ, ಬಹುತೇಕ ಶಾಸಕರ ಬೆಂಬಲ ಹಾಗೂ ರಾಹುಲ್ ಗಾಂಧಿಯವರ ಬೆಂಬಲ ಬಲತುಂಬಿದ್ದರೆ. ಸೋನಿಯಾ ಗಾಂಧಿ ಮತ್ತು ಖರ್ಗೆಯವರ ಮೌನ ಡಿಕೆಶಿಗೆ ಬಲ ತಂದಿದೆ. ಈಗ ನಡೆಯುತ್ತಿರುವುದು ಬೆಳವಣಿಗೆಯಿಂದ ಸಿದ್ದರಾಮಯ್ಯ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. 

 ಜನರು ತಮ್ಮ ಪ್ರತಿನಿಧಿಯನ್ನು ಆರಸಿಕೊಳ್ಳುತ್ತಾರೆ. ಜನಪ್ರತಿನಿಧಿಗಳು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನು ಆರಿಸುತ್ತಾರೆ. ಈ ಮಧ್ಯೆ ಹೈಕಮಾಂಡಿಗೆ ಏನು ಕೆಲಸ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಹೈಕಮಾಂಡ್ ಸಂಸ್ಕೃತಿಯೇ ಒಂದು ಕಪ್ಪು ಚುಕ್ಕೆ. ಇದು ಶಾಸಕರ ಹಕ್ಕನ್ನು ಕಿತ್ತುಕೊಳ್ಳುವ ಸಂಸ್ಕ್ರತಿ. ಇದು ಕೊನೆಯಾಗಬೇಕು. ಶಾಸಕರ ಬೆಂಬಲ ಯಾರಿಗೆ ಇರುತ್ತದೋ ಅವರು ಶಾಸಕಾಂಗ ಪಕ್ಷದ ನಾಯಕರಾಗಬೇಕು. ಆಗ ಈ ಹಗ್ಗಜಗ್ಗಾಟದ ಪ್ರಸಂಗವೇ ಬರುವುದಿಲ್ಲ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!