ಬಿಎಸ್ಪಿ ಎಂದ ತಕ್ಷಣ ನಮಗೆಲ್ಲ ನೆನಪಾಗುವುದು ಕಾನ್ಶಿರಾಂ ಅವರ ಆ ಸೈಕಲ್ ತುಳಿತ, ಅವರ ಹೋರಾಟ, ರಾಜಕೀಯ ಸಿದ್ಧಾಂತ, ಒಗ್ಗಟ್ಟಾಗಿಸುವ ಅವರ ರಣತಂತ್ರ ಹಾಗೂ ಬದ್ಧತೆ. ಇನ್ನೊಂದು ಕಡೆ ಮಾಯಾವತಿಯವರ ಬಿಜೆಪಿ ಜೊತೆಗಿನ ಸಂಬಂಧ, ಭವ್ಯವಾದ ಮೂರ್ತಿಗಳು, ಅಧಿಕಾರದ ದಾಹಕ್ಕೆ ಸಿದ್ಧಾಂತವನ್ನು ಗಾಳಿಗೆ ತೂರಿರುವುದು.
ಕಾನ್ಶಿರಾಂ ಅವರು ಎಸ್ಸಿ, ಎಸ್ಟಿ, ಒಬಿಸಿಗಳಿಗೆ ರಾಜಕೀಯ ಪಕ್ಷವೊಂದಿರಬೇಕು. ಇವರೇ ಸ್ವತಃ ರಾಜಕೀಯ ಅಧಿಕಾರ ಹಿಡಿದಾಗ ಮಾತ್ರ ಈ ಸಮುದಾಯಗಳ ಏಳಿಗೆ ಆಗಲು ಸಾಧ್ಯವೆಂದು ಅರಿತು, 1984 ರಲ್ಲಿ ಬಿಎಸ್ಪಿ ಎನ್ನುವ ರಾಜಕೀಯ ಪಕ್ಷ ಕಟ್ಟಿ ಬೆಳೆಸಿದರು. ಅವರ ಉದ್ದೇಶ ಕೆಳವರ್ಗದವರಿಗೂ ಅಧಿಕಾರ ಕೊಡಿಸುವುದಾಗಿತ್ತು.
ಆದರೆ ಇವತ್ತು ಆ ಪಕ್ಷ ಅವರ ಉದ್ದೇಶದಂತೆ ನಡೆಯದೆ, ತದ್ವಿರುದ್ಧವಾಗಿ ಸಾಗುತ್ತಿದೆ. ಕಾನ್ಶಿರಾಂ ಅವರು ಇರುವಾಗಲೇ 1995 ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಮಾಯಾವತಿ ಅವರು ಮೊಟ್ಟ ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗುವ ಮೂಲಕ ಮೊಟ್ಟ ಮೊದಲ ದಲಿತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1997ರಲ್ಲಿಯೂ ಕೂಡ 6-7 ತಿಂಗಳುಗಳ ಕಾಲ ಮುಖ್ಯಮಂತ್ರಿಯಾದ ಅವರು ನೂರಾರು ಪ್ರತಿಮೆಗಳನ್ನು ಸ್ಥಾಪಿಸುವುದರಲ್ಲಿಯೇ ಕಾಲ ಕಳೆದರು. ಅದಾದನಂತರ 2002 ರಲ್ಲಿ ಮತ್ತೆ ಬಿಜೆಪಿ ಬೆಂಬಲದೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಕುರ್ಚಿ ಹತ್ತಿದರು.
ಅದಾಗಲೇ ಬಿಜೆಪಿ ಕೋಮುವಾದಿಗಳ ಪಕ್ಷವೆಂದು ದೇಶದಾದ್ಯಂತ ಜಗಜ್ಜಾಹೀರಾಗಿತ್ತು. 1991-92 ರ ಹೊತ್ತಿಗೆ ಅಯೋಧ್ಯದಲ್ಲಿ ಬಾಬರಿ ಮಸೀದಿನ ಗಲಾಟೆ, 2002ರಲ್ಲಿ ಗುಜರಾತನ ನರಮೇಧದಲ್ಲಿ ಬಿಜೆಪಿಯ ಪಾತ್ರ ಇದ್ದದ್ದು ದೇಶದ ತುಂಬೆಲ್ಲ ಸುದ್ದಿಯಾಗಿತ್ತು. ಬಿಜೆಪಿಯು ಸಂಘ ಪಾರಿವಾರದ ರಾಜಕೀಯ ಮುಖ ಎಂದು ಎಲ್ಲರಿಗೂ ತಿಳಿದಿತ್ತು. ಹೀಗಿದ್ದಾಗ್ಯೂ ಅಧಿಕಾರದ ದಾಹಕ್ಕೋಸ್ಕರ ಮಾಯಾವತಿಯವರು ಕೋಮುವಾದಿ ಬಿಜೆಪಿ ಪಕ್ಷದ ಜೊತೆಗೆ ಸೇರಿ ಅಧಿಕಾರ ಹಿಡಿಯಲು ಹಿಂದೆ ಮುಂದೆ ನೋಡಲಿಲ್ಲ.
‘ಬೆಹನ್ ಜೀ’ ಎಂದೇ ಖ್ಯಾತರಾದ ಮಾಯಾವತಿ ಅವರು ತಮ್ಮ ಪಕ್ಷದಲ್ಲಿ ಬ್ರಾಹ್ಮಣರನ್ನೂ ಅತ್ಯುನ್ನತ ಹುದ್ದೆಗಳನ್ನು ನೀಡುವುದರ ಮೂಲಕ 2007 ರ ಉತ್ತರ ಪ್ರದೇಶದ ವಿಧಾನ ಸಭೆ ಚುನಾವಣೆ ಎದುರಿಸಿದರು. ಆವಾಗ ಮಾಯಾವತಿಯವರಿಗೆ ಬ್ರಾಹ್ಮಣ ಸಮುದಾಯದ ಬೆಂಬಲವಿತ್ತು. ಈ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷದ ಘೋಷಣೆ “ಹಾಥಿ ನಹಿ ಗಣೇಶ್ ಹೈ, ಬ್ರಹ್ಮ-ವಿಷ್ಣು-ಮಹೇಶ್ ಹೈ” ಎಂದಾಗಿತ್ತು.
ಬ್ರಾಹ್ಮಣ ಸಮುದಾಯದ ಬೆಂಬಲದಿಂದಲೇ 2007 ರಲ್ಲಿ ಮಾಯಾವತಿ ಅವರು ಅಧಿಕಾರಕ್ಕೇರಿದರು. ಪೂರ್ಣಾವಧಿ ಅಧಿಕಾರ ನಡೆಸಿದರು. ಅದೇ ಅವರ ಕೊನೆಯ ಮುಖ್ಯಮಂತ್ರಿ ಅಧಿಕಾರದ ಅವಧಿ. ಆಮೇಲೆ ಅವರು ಕೂಡ 28 ಕೋಟಿ ಆದಾಯ ತೆರಿಗೆಯನ್ನು ಪಾವತಿಸುವ ದೇಶದ ಅಗ್ರ 20 ತೆರಿಗೆದಾರರಲ್ಲಿ ಸ್ಥಾನ ಪಡೆದರು.
ಆವಾಗಿನಿಂದ ಅವರ ನೇತೃತ್ವದ ಪಕ್ಷಕ್ಕೆ ಶುಕ್ರದೆಸೆ ಶುರುವಾಗಿದ್ದು. ಈಗ ಉತ್ತರ ಪ್ರದೇಶದಲ್ಲಿ 400+ ವಿಧಾನಸಭೆ ಕ್ಷೇತ್ರಗಳಿಗೆ ಬಿಎಸ್ಪಿ ಒಂದು ಕ್ಷೆತ್ರದಲ್ಲಿ ಮಾತ್ರ ಗೆದ್ದಿದೆ. ರಾಜಕೀಯ ತಪ್ಪು ನಡೆಯಿಂದಾಗಿ ಇಂದು ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಮೂಲೆ ಗುಂಪಾಗಿದೆ. ಪರಿಣಾಮ ಬಿಜೆಪಿ ಗದ್ದುಗೆ ಏರಿ ಕುಳಿತಿದೆ. ಬಿಜೆಪಿ ಬೆಳೆಯಲು ಬಿಎಸ್ಪಿ ಕೂಡ ಒಂದು ಕಾರಣ.
ಬಿಎಸ್ಪಿ ಪಕ್ಷ ಎಲ್ಲಿವರೆಗೆ ತಲುಪಿದೆ ಎಂದರೆ ಪ್ರಸ್ತುತ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಹತ್ತಿರ ಲಕ್ಷ ಲಕ್ಷಗಟ್ಟಲೆ ಬೇಡಿಕೆ ಇಡುವಷ್ಟು ಮಟ್ಟಕ್ಕೆ! ಇದು ಆಶ್ಚರ್ಯವಾದರೂ ಕೂಡ ನಿಜ. ಬೀದರ್ ಜಿಲ್ಲೆಯ ಹುಮನಾಬಾದ ಕ್ಷೇತ್ರದಿಂದ ಅಂಕುಶ್ ಗೋಖಲೆ ಅವರಿಗೆ ಬಿಎಸ್ಪಿ ಪಕ್ಷದಿಂದ ಟಿಕೆಟ್ ಘೋಷಣೆ ಆಗಿತ್ತು. ಆದರೀಗ ಅವರಿಗೆ ಬಿ ಫಾರಂ ನೀಡುತ್ತಿಲ್ಲ. ‘ಬಿ-ಫಾರಂ ಕೊಡಲು ಪಕ್ಷದ ಮುಖಂಡರು ನನ್ನಲ್ಲಿ 50 ಲಕ್ಷದ ಬೇಡಿಕೆ ಇಟ್ಟಿದ್ದಾರೆ’ ಎಂದು ಸ್ವತಃ ಅವರೇ ಪ್ರೆಸ್ ಮೀಟ್ ನಲ್ಲಿ ಬಹಿರಂಗ ಪಡಿಸಿ, ಅವರು ಹಾಗೂ ಅವರ ಸಂಗಡಿಗರು ಮನನೊಂದು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಕೊಟ್ಟಿದ್ದಾರೆ.
ಅಂಕುಶ ಗೋಖಲೆ 2013 ರ ವಿಧಾನಸಭಾ ಚುನಾವಣೆಯಲ್ಲಿ ಹುಮನಾಬಾದ ಕ್ಷೇತ್ರದಿಂದ ಬಿಎಸ್ಪಿ ಪಕ್ಷದಿಂದ ಸ್ಪರ್ಧಿಸಿ 3 ನೇ ಸ್ಥಾನ ಪಡೆದಿದ್ದರು. ಈ ಪಕ್ಷದ ನಡೆ ನೋಡಿದರೆ ಇದು ಮುಂದಿನ ದಿನಗಳಲ್ಲಿ ಹೇಳ ಹೆಸರಿಲ್ಲದಂತೆ ಆದರೂ ಕೂಡ ಆಶ್ಚರ್ಯವೇನಿಲ್ಲ.
- ಚಿತ್ರಶೇನ್ ಫುಲೆ

The Politic is now on WhatsApp. Follow our channel for sharp analysis and opinions on the latest developments.
























