ಈಗಾಗಲೇ ಲೈಂಗಿಕ ಪ್ರಕರಣದಲ್ಲಿ ಸಿಲುಕಿ ಜೈಲುಟ ಮಾಡುತ್ತಿರುವ ಮುರುಘಾ ಶ್ರೀಗಳ ವಿರುದ್ಧ ನಿನ್ನೆ (ಗುರುವಾರ) ತಡರಾತ್ರಿ ಮತ್ತೊಂದು ದೂರು ದಾಖಲಾಗಿದೆ. ನಿನ್ನೆ ಪಾಲಕರೊಂದಿಗೆ ಅಕ್ಕಮಹಾದೇವಿ ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಲ್ಕು ಸಂತೃಸ್ತ ಬಾಲೆಯರು ‘ಒಡನಾಡಿ’ಯ ಸ್ಟ್ಯಾನ್ಲಿ ಅವರನ್ನು ಸಂಪರ್ಕಿಸಿ, ಅವರ ಸಲಹೆ ಮೇರೆಗೆ ತಮ್ಮ ಪೋಷಕರೊಂದಿಗೆ ಮೈಸೂರಿನ ‘ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ’ಯ ಎದುರು ಹಾಜರಾಗಿ ದೂರು ದಾಖಲಿಸಿದ್ದಾರೆ.
ಸಿಡಬ್ಲ್ಯೂಸಿಯು ಮಕ್ಕಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಸಂತ್ರಸ್ತ ಬಾಲೆಯರ ಹೇಳಿಕೆ ದಾಖಲಾಸಿಕೊಂಡು, ತಕ್ಷಣವೇ ಮುರುಘಾ ಶ್ರೀ ವಿರುದ್ಧ ದೂರು ದಾಖಲಾಸಿಕೊಳ್ಳಬೇಕೆಂದು ಆದೇಶಿಸಿದೆ. ಆದೇಶದ ಮೇರೆಗೆ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮುರುಘಾ ಶ್ರೀ ಒಳಗೊಂಡಂತೆ ಏಳು ಜನರ ವಿರುದ್ಧ ದೂರು ದಾಖಲಾಗಿದೆ.
ಇನ್ನೂ ಋತಿಮತಿಯಾಗದ ಸಣ್ಣ ಮಕ್ಕಳನ್ನು ತನ್ನ ವಿಕೃತ ಕಾಮಕ್ಕೆ ಬಳಸಿಕೊಂಡಿರುವ ಅಘಾತಕಾರಿ ಅಂಶ ಎಫ್ಐಆರ್ ನಲ್ಲಿ ಉಲ್ಲೇಖವಾಗಿರುವುದು ಅಘಾತಕಾರಿ ಸಂಗತಿಯಾಗಿದೆ.
ಮೇಲ್ನೋಟಕ್ಕೆ ಸ್ಪಷ್ಟವಾಗಿ ಇವು ಬಿಡಿಬಿಡಿಯಾದ ಪ್ರಕರಣಗಳು ಎನಿಸದೆ, ಇದೊಂದು ದೊಡ್ಡ ಲೈಂಗಿಕ ಹಗರಣ ಎನಿಸುತ್ತಿದೆ. ನ್ಯಾಯಾಂಗದ ಕಣ್ಗಾವಲಿನಲ್ಲಿ ನಿಷ್ಪಕ್ಷಪಾತ ತನಿಖೆ ನಡೆದರೆ ಮಾತ್ರ ಈ ಲೈಂಗಿಕ ಹಗರಣದ ಸತ್ಯಾಸತ್ಯತೆ ಬೆಳಕಿಗೆ ಬಂದು, ಎಲ್ಲಾ ಸಂತ್ರಸ್ತ ಬಾಲೆಯರಿಗೂ ನ್ಯಾಯ ಸಿಗಬಹುದು. ಈ ಕೆಲಸ ಮಾಡಬೇಕಿದ್ದ ಸರ್ಕಾರವೇ ಆರೋಪಿಯ ಪರವಾಗಿ ವಕಾಲತ್ತು ವಹಿಸುವ ಮೂಲಕ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ವಿರೋಧ ಪಕ್ಷಗಳೂ ಕುರುಡಾಗಿವೆ. ಈಗ ಮಕ್ಕಳ ಮತ್ತು ಪೋಷಕರ ಮುಂದಿರುವ ಏಕೈಕ ಆಸರೆ, ನಂಬಿಕೆ ಘನ ನ್ಯಾಯಾಲಯ ಮಾತ್ರ!